ಕೊಚ್ಚಿ(ಕೇರಳಂ):ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ವರಿಷ್ಠರು ತಾತ್ಕಾಲಿಕ ಬ್ರೇಕ್ ಹಾಕುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳಂ ರಾಜ್ಯಕ್ಕೆ ವಿಶ್ರಾಂತಿಗೆ ತೆರಳಿದ್ದಾರೆ.
ಕೇರಳಂನ ಕೊಚ್ಚಿಯ ಹಿನ್ನೀರಿನಲ್ಲಿ ನಿರ್ಮಿಸಿರುವ ರಮದಾ ವೈಂಧಮ್ ಐಷಾರಾಮಿ ರೆಸಾರ್ಟ್ಗೆ ಸಿದ್ದರಾಮಯ್ಯ ಸ್ನೇಹಿತರ ಜೊತೆ ತೆರಳಿದ್ದಾರೆ.
ಸಚಿವ, ಶಾಸಕರ ದಂಡು
ಸಿದ್ದರಾಮಯ್ಯ ಜೊತೆ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಪಿ.ಎಂ.ಅಶೋಕ್, ಬಿ.ಆರ್.ಪಾಟೀಲ್, ಹಂಪನಗೌಡ ಬಾದರ್ಲಿ ಸೇರಿದಂತೆ ಕೆಲವು ಸ್ನೇಹಿತರು ತೆರಳಿದ್ದಾರೆ.
ಅಧಿಕಾರ ಇಲ್ಲದ ಸಂದರ್ಭದಲ್ಲಿ ಸಿದ್ದರಾಮಯ್ಯ ನಗರ ಬಿಟ್ಟು ಹೊರಗೆ ವಿಶ್ರಾಂತಿ ಪಡೆಯುತ್ತಾರೆ ಎಂದರೆ, ರಾಜ್ಯ ರಾಜಕೀಯದಲ್ಲಿ ಏನೂ ತಲ್ಲಣವುಂಟು ಮಾಡುತ್ತದೆ ಎಂಬ ಭಾವನೆ ಪಕ್ಷದ ವಲಯದಲ್ಲಿ ಕೇಳಿಬರುತ್ತದೆ.

ಹಿಂದೆಯೂ ರೆಸಾರ್ಟ್ ವಿಶ್ರಾಂತಿ
ಈ ಹಿಂದೆ ಇದೇ ರೆಸಾರ್ಟ್ ಹಾಗೂ ಧರ್ಮಸ್ಥಳದಲ್ಲಿ ಆಯುರ್ವೇದ ಚಿಕಿತ್ಸೆಗೆ ತೆರಳಿದ್ದ ಸಂದರ್ಭದಲ್ಲೂ ಪಕ್ಷದ ರಾಷ್ಟ್ರೀಯ ನಾಯಕರೊಬ್ಬರಿಗೆ ಧಕ್ಕಬೇಕಾದ ಅಧಿಕಾರ ಕೈ ತಪ್ಪಿತು.
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ನಾಯಕತ್ವ ವಹಿಸಿದ್ದ ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ಅಧಿಕಾರದಿಂದ ಕೆಳಗಿಳಿದ ನಂತರ ಮೌನಕ್ಕೆ ಶರಣಾಗಿರುವ ಸಿದ್ದರಾಮಯ್ಯ ಯಾವುದೇ ಸಕ್ರಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಮತ್ತು ಮಾಧ್ಯಮಗಳ ಮುಂದೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಸಚಿವ ಆಕಾಂಕ್ಷಿಗಳು
ಶಿವಕುಮಾರ್ ಸಂಪುಟಕ್ಕೆ ಸೇರಬಯಸುವ ಶಾಸಕ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಪ್ರತಿನಿತ್ಯ ಭೇಟಿ ಮಾಡಿ, ತಮಗೆ ಮಂತ್ರಿ ಸ್ಥಾನ ಕೊಡಿಸುವಂತೆ ಕೋರುತ್ತಿದ್ದರು.
ಕೆಲವರು ಇಡೀ ದಿನ ಅವರ ಜೊತೆಯೇ ಕಾಲ ಕಳೆಯುತ್ತಿದ್ದರು, ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂಬುದು ತಿಳಿಯುತ್ತಿದ್ದಂತೆ ಸಿದ್ದರಾಮಯ್ಯ ಜೊತೆ ಎಲ್ಲರೂ ಪ್ರವಾಸ ಕೈಗೊಂಡಿದ್ದಾರೆ.


