ಬೆಂಗಳೂರು:ಸಂಪುಟದಲ್ಲಿ ಸ್ಥಾನ ದೊರೆಯದ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಕೂಡಲೇ ಅಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ರಾಜೀನಾಮೆ ಕೊಡುವವರನ್ನು ತಡೆಯೋಕೆ ಆಗುವುದಿಲ್ಲ, ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಅಂಗೀಕರಿಸುತ್ತೇನೆ ಎಂದರು.
ಇದೆಲ್ಲ ರಾಜಕೀಯದಲ್ಲಿ ನಡೆಯೊದೇ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲ ರಾಜಕೀಯದಲ್ಲಿ ನಡೆಯೊದೇ, ಈ ಹಿಂದೆ ನಾನು, ಡಾ.ಪರಮೇಶ್ವರ್ ಮಂತ್ರಿ ಸ್ಥಾನ ಸಿಗದಿದ್ದಾಗ ತಾಳ್ಮೆಯಿಂದ ಇರಲಿಲ್ಲವೇ, ರಾಜಕೀಯ ಭವಿಷ್ಯ ಬೇಕು ಎಂದರೆ ಪಕ್ಷ ಮುಖ್ಯ ಎಂದರು.
ಎಲ್ಲರಿಗೂ ಒಮ್ಮಲೇ ಅವಕಾಶ ದೊರೆಯದು, ಕೆಲವೊಮ್ಮೆ ತಾನಾಗಿಯೇ ಮನೆ ಬಾಗಿಲಿಗೆ ಅಧಿಕಾರ ಬರುತ್ತದೆ, ಕೆಲವೊಮ್ಮೆ ಎಷ್ಟೇ ಕಸರತ್ತು ನಡೆಸಿದರೂ ಲಭಿಸದು.
ನನ್ನ ನಾಲ್ಕು ದಶಕಗಳ ರಾಜಕೀಯದಲ್ಲಿ ಎಲ್ಲವನ್ನೂ ಕಂಡಿದ್ದೇನೆ, ನೋಡಿದ್ದೇನೆ, ಅರಗಿಸಿಕೊಂಡಿದ್ದೇನೆ, ನನಗೆ ಎದುರಾದ ಸಂಕಷ್ಟ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡಿದ್ದರೆ ಈ ಸ್ಥಾನಕ್ಕೆ ಬರಲು ಆಗುತ್ತಿರಲಿಲ್ಲ.
ಇರುವ ಸ್ಥಾನವನ್ನೂ ಕಳೆದುಕೊಳ್ಳುತ್ತೀರಿ
ದುಡುಕಿದರೆ, ಇರುವ ಸ್ಥಾನವನ್ನೂ ಕಳೆದುಕೊಳ್ಳುತ್ತೀರಿ, ದೆಹಲಿ ನಾಯಕರು ಕಠಿಣವಾಗಿದ್ದಾರೆ, ಪಕ್ಷದ ವಿರುದ್ಧ ನಡೆದುಕೊಳ್ಳುವವರನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಈಗ ಅವಕಾಶ ಸಿಗದವರಿಗೆ ಸದ್ಯದಲ್ಲೇ ಪರ್ಯಾಯ ವ್ಯವಸ್ಥೆ ಮಾಡಲಾಗುವುದು, ನಿಗಮ ಮತ್ತು ಮಂಡಳಿಗಳಿಗೆ ನೇಮಕಗೊಂಡವರ ಅಧಿಕಾರಾವಧಿ ಎರಡೂವರೆ ವರ್ಷಕ್ಕೆ ಸೀಮಿತವಾಗಿತ್ತು.
ಅವರಿನ್ನೂ ರಾಜೀನಾಮೆ ನೀಡಿಲ್ಲ, ಅವರ ಸ್ಥಾನಗಳಿಗೆ ನಿಮ್ಮನ್ನು ನೇಮಕ ಮಾಡಲಾಗುವುದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಹಸ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.


